'ವೈಜ್ಞಾನಿಕ ವಿಚಾರ ಧಾರೆ ಬಿತ್ತುವುದೇ ಧ್ಯೇಯ'
ಹರಪನಹಳ್ಳಿ: ವೈಜ್ಞಾನಿಕ ವಿಚಾರ ಧಾರೆ ಮೂಲಕ ವಿಜ್ಞಾನವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದೇ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೂಲ ಉದ್ದೇಶವಾಗಿದೆ ಎಂದು ಸಮಿತಿ ರಾಜ್ಯ ಘಟಕದ ಸಹ ಕಾರ್ಯದರ್ಶಿ ಎಚ್. ಚಂದ್ರಪ್ಪ ತಿಳಿಸಿದ್ದಾರೆ.
ಅವರು ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಅವೈಜ್ಞಾನಿಕ ವಿಚಾರಗಳನ್ನು ದೃಶ್ಯ ಮಾಧ್ಯಮಗಳು ದಿನನಿತ್ಯ ಬಿತ್ತರಿಸುತ್ತವೆ. ವಿಜ್ಞಾನವನ್ನು ಜ್ಞಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ವಿಜ್ಞಾನ ಚಳವಳಿ: ಬಹಳಷ್ಟು ಜನ ಅಕ್ಷರಸ್ಥರೇ ಇಂದು ಅವೈಜ್ಞಾನಿಕತೆ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಚಳವಳಿ ಕಟ್ಟುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಶಿಕ್ಷಣ ಮಹಾವಿದ್ಯಾಲಯದ ಪ್ರೊ. ತಿಮ್ಮಪ್ಪ ಅವರು ಜನರಲ್ಲಿ ಮೌಢ್ಯ ರಕ್ತಗತವಾಗಿ ತುಂಬಿವೆ. ಮೌಢ್ಯಗಳನ್ನು ಮೌಲ್ಯವೆಂದು ಭಾವಿಸಿದ್ದಾರೆ. ಅವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಚಿಂತನೆಗೆ ಹಚ್ಚಬೇಕು, ಜಾತಿ, ಧರ್ಮ ಮೀರಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಅವರು ವಿಜ್ಞಾನ ಸಮಿತಿಯನ್ನು ಶ್ಲಾಘಿಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕದ ನೂತನ ಅಧ್ಯಕ್ಷ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಮನೋಬಲ ಹೆಚ್ಚಿಸಲು ಇಂತಹ ಸಂಘಟನೆ ಬಹಳ ಅವಶ್ಯಕವಾಗಿದ್ದು, ಈ ಸಂಘಟನೆಯಲ್ಲಿ ಹೆಚ್ಚಿನವರು ಶಿಕ್ಷಕರಿದ್ದು, ಸಾಮಾಜಿಕ ಬದ್ಧತೆ ಇರಬೇಕು. ಅದಕ್ಕೆ ಅಧ್ಯಯನಶೀಲತೆ ಬಹಳ ಮುಖ್ಯ ಕೇವಲ ಕೆಜಿವಿಎಸ್ ಗೆ ಸದಸ್ಯರಾದರೆ ಸಾಲದು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಸಂಘಟನೆಯ ಜಿಲ್ಲಾ ಮುಖಂಡಅಲಿಖಾನ್, ಜಿಲ್ಲಾ ಸಮಿತಿ ಸದಸ್ಯ ಬಸವರಾಜ, ರಾಜ್ಯ ಸಮಿತಿ ಸದಸ್ಯ ಗಂಗಾಧರ, ಅಶೋಕ, ಅಂಜಿನಪ್ಪ, ಸದಾಶಿವ, ಹೂವಣ್ಣ ಇದ್ದರು.
No comments:
Post a Comment